ಸ್ವಾತಂತ್ರ್ಯ_ಯಾರಿಂದ_ಬಂತು.. #ವೀರ_ಸೇನಾನಿ_ನೇತಾಜಿ_ಸುಭಾಷ್_ಚಂದ್ರ_ಬೋಸ್ 🙏🙏

#ಸ್ವಾತಂತ್ರ್ಯ_ಯಾರಿಂದ_ಬಂತು

#ವೀರ_ಸೇನಾನಿ_ನೇತಾಜಿ_ಸುಭಾಷ್_ಚಂದ್ರ_ಬೋಸ್

ಭಾರತ ದೇಶ ಕಂಡ ಅಪ್ರತಿಮ ದೇಶಭಕ್ತ, ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್. ಈ ಮಹಾನ್ ರಾಷ್ಟ್ರ ನಾಯಕನ ಜೀವನದ ಘಟನೆಗಳ ಮೆಲುಕೇ ಸ್ಪೂರ್ತಿಯುತವಾದುದು. ಅಂಡಮಾನ್ ನಿಕೋಬಾರ್ ಪ್ರದೇಶಗಳನ್ನು ವಶಕ್ಕೆ ತೆಗೆದುಕೊಂಡು ದೇಶವನ್ನು ಪ್ರಥಮ ಬಾರಿಗೆ ದಾಸ್ಯಮುಕ್ತವನ್ನಾಗಿ ಮಾಡಿದ್ದ ಭರತಮಾತೆಯ ಈ ಧೀರ ಕುವರನ ಜನುಮ ದಿನ (ಜನವರಿ 23) ದಂದು ಸದಾ ಕ್ರಿಯಾಶಿಲರಾಗಿದ್ದ ದೇಶಕ್ಕಾಗಿ ತಮ್ಮ ಬದುಕನ್ನೇ ಮುಡುಪಿಟ್ಟ ಆ ಮಹಾನ್ ಚೇತನವನ್ನು ನಾವೆಲ್ಲ ಒಂದಾಗಿ ಸ್ಮರಿಸೋಣ.

ಭಾರತೀಯರೆಲ್ಲರ ಪ್ರೀತಿಯ “ನೇತಾಜಿ”ಯಾಗಿದ್ದ ಸುಭಾಷ್ ಚಂದ್ರ ಬೋಸ್ ಹುಟ್ಟಿದ್ದು 1897 ಜನವರಿ 23 ರಂದು ಒರಿಸ್ಸಾದ ಕಟಕ್ ನಲ್ಲಿ. ಜಾನಕಿನಾಥ ಬೋಸ್ ಮತ್ತು ಪ್ರಭಾವತಿ ದಂಪತಿಗಳ ಒಂಭತ್ತು ಜನ ಮಕ್ಕಳಲ್ಲಿ ಸುಭಾಷ್ ಆರನೆಯವರು. ಕಟಕ್ ನಲ್ಲಿಯೇ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸಿದ ಬೋಸ್ ಸಣ್ಣ ವಯಸ್ಸಿನಲ್ಲಿಯೇ ಸ್ವಾಮಿ ವಿವೇಕಾನಂದ, ಮಹರ್ಷಿ ಅರವಿಂದರ ಸಾಹಿತ್ಯಗಳಿಂದ ಪ್ರಭಾವಿತರಾಗಿದ್ದರು. 1919 ರಲ್ಲಿ ತತ್ವಶಾಸ್ತ್ರ ವಿಷಯದಲ್ಲಿ ಬಿ.ಎ. ಪದವಿ ಪಡೆದ ಬೋಸ್ 1920 ರ ಸಪ್ಟೆಂಬರ್ ನಲ್ಲಿ ಇಂಗ್ಲೆಂಡ್ ನಲ್ಲಿ ನಡೆದ ಐ.ಸಿ.ಎಸ್. ಪರೀಕ್ಷೆಯಲ್ಲಿ  ನಾಲ್ಕನೆ ಸ್ಥಾನದೊಂದಿಗೆ ಉತ್ತೀರ್ಣರಾದರು.

ವಿದೇಶದಲ್ಲಿ ಕೆಲಸ ಮಾಡಲು ಒಪ್ಪದ ಬೋಸ್ ತಾವು ಗಳಿಸಿದ್ದ ಐ.ಸಿ.ಎಸ್. ಪದವಿಯನ್ನೇ ತಿರಸ್ಕರಿಸಿ 1921 ಜುಲೈ 16 ರಂದು ಭಾರತಕ್ಕೆ ವಾಪಾಸಾದರು. ಅದಾಗ ದೇಶದಲ್ಲಿ ಕಾವೇರಿದ್ದ ಸ್ವಾತಂತ್ರ್ಯ ಸಂಗ್ರಾಮದ ಮುಂದಾಳತ್ವವನ್ನು ವಹಿಸಿದ್ದ ಗಾಂಧೀಜಿಯವವರನ್ನು ಭೇಟಿಯಾದ ಬೋಸ್ ತಾವು ಸಹ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. 1921 ರ ಆಗಸ್ಟ್ ನಿಂದ ಚಿತ್ತರಂಜನ್ ದಾಸ್ ರವರ ಮಾರ್ಗದರ್ಶನದಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವ ಸಲುವಾಗಿ ಯುವಕರನ್ನು ಸಂಘಟಿಸುವಲ್ಲಿ ನಿರತರಾದರು.  ಬ್ರಿಟೀಷರನ್ನು ಕುರಿತಂತೆ ಕಾಂಗ್ರೆಸ್ ಪಕ್ಷವು ತಾಳಿದ್ದ ದ್ವಂದ್ವ ನೀತಿಗಳಿಂದ ಬೇಸತ್ತ ಬೋಸ್ ತಾವು ಚಿತ್ತರಂಜನ್ ದಾಸ್ ರವರ ಜತೆಗೂಡಿ “ಸ್ವರಾಜ್ಯ ಪಕ್ಷ”ದ ಸ್ಥಾಪನೆ ಮಾಡಿದರು. 1923 ರ ಅಕ್ತೋಬರ್ ನಲ್ಲಿ ಚಿತ್ತರಂಜನ್ ದಾಸ್ ರವರು ಆರಂಭಿಸಿದ “ಫಾರ್ವರ್ಡ್” ದಿನಪತ್ರಿಕೆಯ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತ ಬೋಸ್ 1925 ಜೂನ್ 16 ರಂದು ಚಿತ್ತರಂಜನ್ ದಾಸ್ ನಿಧನದ ಬಳಿಕ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡರು.

1927 ನವೆಂಬರ್ ನಲ್ಲಿ ಬಂಗಾಳದ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಜೆಗೊಂಡ ಬೋಸ್ ಅಲ್ಲಿಯೂ ಸಹ ಹತ್ತಾರು ವಿಧದ ಚಳುವಳಿಗಳ ನೇತೃತ್ವ ವಹಿಸಿದರು. ಅಲ್ಲದೆ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ನ ಅಧ್ಯಕ್ಷರಾಗಿಯೂ ಆಯ್ಕೆಯಾದರು. ಆದರೆ ಗಾಂಧಿ ಮತ್ತು ಅವರ ಹಿಂಬಾಲಕರುಗಳಿಗೆ ಸುಭಾಷ್ ಚಂದ್ರ ಬೋಸ್ ಅನುಸರಿಸುತ್ತಿದ್ದ ಕ್ರಾಂತಿಕಾರಿ ಕಾರ್ಯನೀತಿಯು ಅಷ್ಟಾಗಿಸರಿಬರದ ಕಾರಣ ಬೋಸ್ ಪಕ್ಷದಿಂದ ಕ್ರಮೇಣ ದೂರಾಗಬೇಕಾಯಿತು.

19833 ಫೆಬ್ರವರಿ 23 ಕ್ಕೆ ಯುರೋಪ್ ಪ್ರವಾಸ ಪ್ರಂರಂಭಿಸಿದ ಬೋಸ್ ಇಂಗ್ಲೆಂಡ್, ಆಸ್ಟ್ರಿಯಾ, ವಿಯೆನ್ನಾ, ಇಟಲಿ ದೇಶಗಳಿಗೆ ಭೇಟಿಯಿತ್ತರು. ಜೊಕೊಸ್ಲೋವಾಕಿಯಾ, ಪೋಲೆಂಡ್, ಜರ್ಮನಿಗಳಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದ ಕುರಿತಾಗಿ ಪ್ರಚಾರ ನಡೆಸಿದ ಬೋಸ್ ಇಟಲಿಯ ಸರ್ವಾಧಿಕಾರಿಯಾಗಿದ್ದ ಬೆನೆಟ್ಟೋ ಮುಸಲೋನಿಯ ಜತೆಯಲ್ಲಿ ಚರ್ಚೆ ನಡೆಸಿದ್ದರು. 1936 ಏಪ್ರಿಲ್ 8 ರಂದು ಭಾರತಕ್ಕೆ ಮರಳ್ ಬಂದ ಬೋಸ್ ರನ್ನು ಇಲ್ಲಿನ ಬ್ರಿಟೀಷ ಸರ್ಕಾರ ಬಂಧಿಸಿತು. ಇದಾದ ಸ್ವಲ್ಪ ದಿನಗಳ ಬಳಿಕ ಬಿಡುಗಡೆಗೊಂಡ ಬೋಸ್ 1937 ರಲ್ಲಿ ಮತ್ತೆ ಆಸ್ಟ್ರಿಯಾಕ್ಕೆ ಪ್ರಯಾಣ ಕೈಗೊಂಡರು.

1938 ರ ಫೆಬ್ರವರಿಯಲ್ಲಿ ಹರಿಪುರದಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಮಹಾಧಿವೇಶನದ ಅಧ್ಯಕ್ಶರಾಗಿ ಆಯ್ಕೆಗೊಂಡ ಬೋಸ್ ರಿಂದ ಅದೇ ಫೆಬ್ರವರಿ 18 ರಂದು ಐತಿಹಾಸಿಕ ಅಧ್ಯಕ್ಷ ಭಾಷಣವನ್ನು ಮಾಡಿದ್ದರು. ಹಲವಾರು ದೇಶಗಳನ್ನು ಸುತ್ತಿ ಪಡೆದ ರಾಜಕೀಯ ಅನುಭವ, ಒಳನೋತಗಳಿಂದ ಬ್ರಿಟೀಷರ ಒಡೆದು ಆಳುವ ನೀತಿಯ ಕುರಿತು ಕ್ಷಾತ್ರತೇಜದಿಂದ ಮಾಡಿದ ಅಂದಿನ ಭಾಷಣಾವು ಭಾರತದ ಇತಿಹಾಸದಲ್ಲೇ ಒಂದು ಅಸ್ಭುತವಾದ ಭಾಷಣವಾಗಿತ್ತು. ಬೋಸ್ ರವರು ನೀಡಿದ ದೇಶ ವಿಭಜನೆಯ ಬ್ರಿಟೀಷರ ತಂತ್ರದ ಸೂಚನೆಯು ಮುಂದಿನ ಒಂಭತ್ತು ವರ್ಷಗಳಲ್ಲಿಯೇ ನಿಜವಾಯಿತು! ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಧ್ಯೇಯ ಮತ್ತು ಕಾರ್ಯನೀತಿಗಳಾನ್ನು ಕುರಿತು ಬಹಳವೇ ಮೆಚ್ಚುಗೆ ಹೊಂದಿದ್ದ ಬೋಸ್ ರವರಿಗೆ ಸಂಘವು ತನ್ನ ಸಂಘ ``ಶಿಕ್ಷಾ ವರ್ಗ ಶಿಬಿರ’’ ಕ್ಕೆ ಬರಲು ಆಹ್ವಾನಿಸಿತ್ತು. ಬೋಸ್ ಆ ಆಹ್ವಾನವನ್ನು ಪುರಸ್ಕರಿಸಿದ್ದರಾದರೂ ಕಾರಣಾಂತರಗಳಿಂದ ಆ ಭೇಟಿ ಸಾಧ್ಯಾವಾಗಲಿಲ್ಲ. ಕಾಂಗ್ರೆಸ್ ಪಕ್ಷದ ಅಧ್ಯಕ್ಷಗಿರಿಗೆ ನಡೆದ ಪ್ರಥಮ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬೋಸ್ ತಮ್ಮ ಎದುರಾಳಿ ಪಟ್ತಾಭಿ ಸೀತಾರಾಮಯ್ಯನವರಿಗಿಂದ ೨೧೫ ಮತಗಳನ್ನು ಹೆಚ್ಚು ಒಅಡೆಯುವ ಮೂಲಕ ಭಾರೀ ವಿಜಯವನ್ನು ಗಳಿಸಿದ್ದರು. ಆದರೆ ತಮ್ಮ ವಿರುದ್ಧ ಹಲವಾರು ಟೀಕೆಗಳು, ಅನಗತ್ಯ ಋಣಾತ್ಮಕ ಮಾತುಗಳು ಗಾಂಧೀಜಿಯಿಂದ. ಸ್ವಾತಂತ್ರ್ಯದ ಮೋಡಗಳು ಸಮೀಪ ಇರುವಂತೆಯೇ ಬ್ರಿಟಿಷ್ ಸರ್ಕಾರದ ಜತೆ ದುರ್ಬಲ ಕಾಂಗ್ರೆಸ್‌ನ ತಾರ್ಕಿಕ ನಡೆಗಳಿಂದ ಬೇಸತ್ತು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದರು. ಹೀಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ತಮ್ಮದೇ ಫಾರ್ವರ್ಡ್ ಬ್ಲಾಕ್ ಪಕ್ಷವನ್ನು ಸ್ಥಾಪಿಸಿದ ನೇತಾಜಿ ಸುಭಾಶ್ ಚಂದ್ರ ಬೋಸ್ ರವರ ಕ್ರಾಂತಿಕಾರಿ ಚಟುವಟಿಕೆಗಳು ಮುಂದುವರಿದವು. ಇದರಿಂದ ಕೆರಳಿದ ಬ್ರಿಟೀಷ್ ಸರ್ಕಾರ ಮತ್ತೆ ಸುಭಾಷ್ ಚಂದ್ರ ಬೋಸ್ ರನ್ನು ಬಂಧಿಸಿ ಕಾರಾಗ್ರಹಕ್ಕೆ ತಳ್ಳಿತು.

ಆದರೆ 1941 ಜನವರಿ 26 ಕ್ಕೆ ಜೈಲಿನಿಂದ ತಪ್ಪಿಸಿಕೊಂಡು ಕಾಬೂಲ್ ಮಾರ್ಗವಾಗಿ ಬರ್ಲಿನ್ ಸೇರಿದ ಬೋಸ್ ಸೈನಿಕ ಕಾರ್ಯಾಚರಣೆಗೆ ತೊಡಗಿದರು. 1941 ನವೆಂಬರ್ 2 ಕ್ಕೆ ‘ಫ್ರೀ ಇಂಡಿಯಾ ಸೆಂಟರ್’ ನ್ನು ಉದ್ಘಾಟಿಸಿದ ಬೋಸ್ “ಆಜಾದ್ ಹಿಂದ್” ಲಾಂಛನವನ್ನು ಬಿಡುಗಡೆಗೊಳಿಸಿದರು. ಅಲ್ಲಿಂದ ಮುಂದೆ ಬರ್ಲಿನ್ ನಲ್ಲಿಯೇ ಇದ್ದು ತಮ್ಮ ಸೈನಿಕರಿಗೆ ಸೇನಾ ತರಬೇತಿಯನ್ನಿ ಕೊಡಲು ಪ್ರಾರಂಭಿಸಿದ ಬೋಸ್ ಬರ್ಲಿನ್ ರೇಡಿಯೋದಲ್ಲಿ ಆಗಾಗ ಭಾಷಣಾಗಳನ್ನು ಮಾಡುತ್ತಿದ್ದರು. ಅಲ್ಲಿಂದ ಮುಂದೆ ಜಪಾನ್ ಗೆ ತೆರಳಿದ ಬೋಸ್ ಅಲ್ಲಿ ಭರತ ದೇಶದ ಪೂರ್ವಗಡಿಗಳಲ್ಲಿ ಸೈನ್ಯವನ್ನು ಸಜ್ಜುಗೊಳಿಸಲು ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಮುಖಾಂತರ ಭೂಗತ ಚಟುವಟಿಕೆಯಲ್ಲಿ ನಿರತರಾದರು. ಮುಂದೆ ಅಪ್ರತಿಮ ಬಲಿಷ್ತ ಸೈನ್ಯವಾಗಿ ಬೆಳೆದ ಆಜಾದ್ ಹಿಂದ್ ಫೌಜ್ ಗೆ ಭಾರತ ಮತ್ತು ಇತರೇ ಬ್ರಿಟೀಷ್ ವಸಾಹತು ದೇಶಗಳಲ್ಲಿನ ಸೈನ್ಯದಲ್ಲಿದ್ದ ನಿವೃತ್ತ ಯುದ್ದಕೈದಿಗಳು ಸಾಕಷ್ಟು ಸಂಖ್ಯೆಯಲ್ಲಿ ಸೇರಿಕೊಂಡರು.

ಮುಂದೆ ಅತ್ಯಂದ ದಕ್ಷ ಸೈನ್ಯವಾಗಿ ರೂಪುಗೊಂಡ ಆಜಾದ್ ಹಿಂದ್ ಸೇನೆ ಇಂಡಿಯನ್ ನ್ಯಾಷನಲ್ ಆರ್ಮಿ(I.N.A.)ಯಾಗಿ ರೂಪುಗೊಂಡಿತು. ಮತ್ತೆ ಬೋಸ್ ಪೂರ್ವ ಏಷ್ಯಾ ರಾಷ್ಟ್ರಗಳನ್ನೆಲ್ಲಾ ಸುತ್ತಿ ಸ್ವರಾಜ್ಯ ಹೋರಾಟಕ್ಕೆ ಅಗಾಧವಾದ ಬೆಂಬಲವನ್ನು ಗಳಿಸಿಕೊಂಡರು. ತಮ್ಮ ಕೆಚ್ಚೆದೆಯ ಹೋರಾಟದಿಂದ ಬ್ರಿಟಿಷರ ಅಧೀನದಲ್ಲಿದ್ದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹವನ್ನು ವಶಪಡಿಸಿಕೊಂಡ ಬೋಸ್ ಅದಕ್ಕೆ “ಷಹೀದ್ ಸ್ವರಾಜ್” ಎಂದು ಕರೆದು  “ಅರ್ಜೆ-ಹುಕುಮಂತ್-ಎ-ಆಜಾದ್ ಹಿಂದ್”(ಸ್ವತಂತ್ರ ಭಾರತದ ಹಂಗಾಮಿ ಸರ್ಕಾರ)ನ್ನು ಸ್ಥಾಪಿಸಿದರು ಮತ್ತು  I.N.A.ನ ಕಮಾಂಡರ್ ಇನ್ ಚೀಫ್ ಆಗಿ ನೇಮಕಗೊಂದರು.



ಸುಭಾಶ್ ಸಾವಿನ ಸುತ್ತ.....

ಇಂತಹಾ ಧೀಮಂತ ರಾಷ್ಟ್ರ ನಾಯಕರಾದ ನೇತಾಜಿಯವರು 1945 ಆಗಸ್ಟ್ 18 ರಂದು ದಕ್ಷಿಣ ವಿಯೆಟ್ನಾಂ ನ ಸೈಗಾನ್ ನಿಂದ ಟೋಕಿಯೋದತ್ತ ವಿಮಾನದಲ್ಲಿ ಪ್ರಯಾಣಿಸುತ್ತಿರಬೇಕಾದರೆ ಅವರಿದ್ದ ವಿಮಾನ ಸ್ಪೋಟಗೊಂಡ ಪರಿಣಾಮ ಸಾವನ್ನಪ್ಪಿದರೆನ್ನಲಾಗುತ್ತದೆ. ಆದರೆ ಬೋಸ್ ರವರ ಸಾವಿನ ಕುರಿತಂತೆ ಇಂದಿಗೂ ಖಚಿತವಾದ ಆಧಾರಗಳು ಲಭ್ಯವಿಲ್ಲ. 1945 ಆಗಸ್ಟ್ 23 ನೇ ದಿನಾಂಕದಂದು ಜಪಾನ್ ನ ‘ರೇಡಿಯೋ ಟೋಕಿಯೋ’ ಪ್ರಥಮ ಬಾರಿಗೆ ಈ ಸುದ್ದಿಯನ್ನು ಪ್ರಸಾರ ಮಾಡಿದಾಗಿನಿಂದ ಇವತ್ತಿನ ವರೆವಿಗೂ ಸುಭಾಷ್ ಚಂದ್ರ ಬೋಸ್ ರ ಸಾವಿನ ವಿಚಾರವು ನಿಗೂಢವಾಗಿಯೇ ಉಳಿದಿದೆ.

ಅಂದು ರೇಡಿಯೋದಲ್ಲಿನ ವಾರ್ತಾ ವಾಚಕರು ಹೇಳಿದ್ದೆಂದರೆ- “ವಿಮಾನ ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡ ಮಿಸ್ಟರ್ ಸುಭಾಶ್ಚಂದ್ರ ಬೋಸ್ ಜಪಾನಿನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು. ಭಾರತದ ‘ಆಜಾದ್ ಹಿಂದ್‌’ ಪ್ರಾಂತೀಯ ಸರ್ಕಾರದ ಮುಖ್ಯಸ್ಥರಾಗಿದ್ದ ಮಿ. ಬೋಸ್ ಆಗಸ್ಟ್ ಹದಿನಾರನೇ ತಾರೀಕಿನಂದು ವಿಮಾನದ ಮೂಲಕ ಸಿಂಗಾಪುರದಿಂದ ಜಪಾನಿಗೆ ಪ್ರಯಾಣಿಸುತ್ತಿದ್ದರು. ಜಪಾನಿನ ರಾಜಧಾನಿ ಟೋಕಿಯೋದಲ್ಲಿ ಅಲ್ಲಿನ ಜಪಾನೀ ಸರಕಾರದ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಲಿಕ್ಕಾಗಿ ಹೋಗುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೀಡಾಯಿತು. ಆಗಸ್ಟ್ ಹದಿನೆಂಟರ ಹದಿನಾಲ್ಕು ಗಂಟೆಗೆ (ಪೂರ್ವಾಹ್ನ ಎರಡು ಗಂಟೆಗೆ) ತೈಹೋಕು ವಿಮಾನ ನಿಲ್ದಾಣದ ಸಮೀಪ ಈ ಅಪಘಾತ ಸಂಭವಿಸಿತು. ತೀವ್ರವಾಗಿ ಗಾಯಗೊಂಡ ಬೋಸ್‌ರನ್ನು ಜಪಾನಿನ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಆತ ಮಧ್ಯರಾತ್ರಿ ಸಾವನ್ನಪ್ಪಿದರು. ಬೋಸ್ ಅವರ ಜೊತೆಗೆ ಪ್ರಯಾಣಿಸುತ್ತಿದ್ದ ಲೆಫ್ಟಿನೆಂಟ್ ಜನರಲ್ ತ್ಸುನಾಮಸಾ ಶಿಡೈ ಅವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಸುಭಾಶ್ಚಂದ್ರ ಬೋಸ್ ಅವರ ಸೇನೆಯ ಅಧಿಕಾರಿ ಹಾಗೂ ಆಪ್ತ ಹಬೀಬರ್ ರೆಹಮಾನ್ ಮತ್ತಿತರ ನಾಲ್ಕು ಮಂದಿ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ’’

ಆದರೆ ಅಂದಿನ ಆ ಪಘಾತದ ಕುರಿತಂತೆ ಜಪಾನ್ ಸರ್ಕಾರವಾಗಲೀ, ಅಲ್ಲಿನ ಸೈನ್ಯದ ಮುಖ್ಯಸ್ಥರಾಗಲೀ ಯಾವುದೇ ಅಧಿಕೃತ ಘೋಷಣೆ ಮಾದಿಲ್ಲ. ಇದೇ ಕಾರಣಾದಿಂದಾಗಿ ಅಂದು ಏನು ನಡೆಯಿತು? ಅಂದು ನಿಜವಾಗಿಯೂ ನೇತಾಜಿಯವರಿದ್ದ ವಿಮಾನ ಅಪಘಾತಕ್ಕೀಡಾಗಿತ್ತೆ? ಎನ್ನುವ ಬಗ್ಗೆ ಇಂದಿಗೂ ಅನುಮಾನಗಳುಳಿದುಕೊಂಡಿವೆ.

1947 ಆಗಸ್ಟ್ 15 ರಂದು ಭಾರತವು ಬ್ರಿಟೀಷರ ದಾಸ್ಯದಿಂದ ಬಿಡುಗಡೆಗೊಂಡು ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಿತು.

ಅಂದಿನಿಂದ ಇಂದಿನವರೆಗೆ ಕೇಂದ್ರದಲ್ಲಿ ಆಳ್ವೆಕೆ ನಡೆಸಿದ ಸರ್ಕಾರಗಳು ನೇತಾಜಿಯವರ ಸಾವಿನ ಕುರಿತಂತೆ ಸತ್ಯವನ್ನು ಬಹಿರಂಗಪಡಿಸುವ ಸಲುವಾಗಿ ಮೂರು ತನಿಖಾ ಸಮಿತಿಗಳಾನ್ನು ರಚಿಸಿದ್ದವು. ಅದರಲ್ಲಿ ಎರಡು ನೆಹರೂ ಮತ್ತು ಅವರ ಪುತ್ರಿ ಇಂದಿರಾಗಂಧಿಯವರ ಸರ್ಕಾರಗಳು ರಚಿಸಿದ್ದರೆ ಇನ್ನೊಂದು ವಾಜಪೇಯಿಯವರ ನೇತೃತ್ವದ ಎನ್.ಡಿ.ಎ. ಸರ್ಕಾರ ರಚನೆ ಮಾಡಿತ್ತು. ಇವುಗಳಲ್ಲಿ ಮೊದಲೆರಡು ಸಮಿತಿಗಳು ನೇತಾಜಿಯವರು “ವಿಮಾನಾಪಘಾತದಲ್ಲಿ ಮಡಿದರು” ಎನ್ನುವುದಾಗಿ ವರದಿ ಮಾಡಿದರೆ ೧೯೯೯ ರಲ್ಲಿ ರಚಿಸಲಾದ ಸುಪ್ರೀಂ ಕೋರ್ಟ್ ಮಿವೃತ್ತ ನ್ಯಾಯಮೂರ್ತಿ ಮನೋಜ್ ಮುಖರ್ಜಿಯವರ ಸಮಿತಿ ಮಾತ್ರ ವಿಭಿನ್ನ ವರದಿಯನ್ನು ನೀಡಿತ್ತು! ಸುಭಾಷ್ ಚಂದ್ರ ಬೋಸ್ ಈಗ ಬದುಕಿಲ್ಲ, ಆದರೆ 1945 ಆಗಸ್ಟ್ 18ರಂದು ತೈವಾನಿನ ತೈಹೋಕು ಬಳಿ ನಡೆದ ವಿಮಾನ ಅಪಘಾತದಲ್ಲಿ ಮಡಿದರು ಎನ್ನಲು ಅಂಥದ್ದೊಂದು ಅಪಘಾತವೇ ನಡೆದಿಲ್ಲ, ಆ ವಿಮಾನ ಮರುದಿನವೂ ಹಾರಾಟ ನಡೆಸಿತ್ತು ಅಷ್ಟೇ ಅಲ್ಲ, ಜಪಾನಿನ ರೆಂಕೋಜಿ ದೇವಾಲಯದಲ್ಲಿರುವ ಚಿತಾಭಸ್ಮ ಕೂಡ ನೇತಾಜಿವರದ್ದಲ್ಲ ಎಂಬ ಕಠೋರ ಸತ್ಯವನ್ನು ಬಹಿರಂಗ ಮಾಡಿತ್ತು!

2006 ರಲ್ಲಿ ಮುಖರ್ಜಿ ಸಮಿತಿಯು ಈ ವರದಿಯನ್ನು ಸರ್ಕಾರಕ್ಕೆ ನೀಡಿದಾಗ ಕೇಂದ್ರದಲ್ಲಿನ ಕಾಂಗ್ರೆಸ್ ನೇತೃತ್ವದ ಯು.ಪಿ.ಎ. ಸರ್ಕಾರ ಮಾತ್ರ ಆ ವರದಿಯನ್ನೇ ತಿರಸ್ಕರಿಸಿತ್ತು!!

ಬೋಸ್ ಬದುಕು-ಸಾವಿಗೆ ಸಂಬಂಧಿಸಿದ “33 ಗೌಪ್ಯ ದಾಖಲೆ”ಗಳನ್ನು ನೀಡುವಂತೆ ಬೋಸ್ ಕುಟುಂಬದ 30 ಸದಸ್ಯರು ಮಾಹಿತಿ ಹಕ್ಕಿನ ಮೂಲಕ ಮನವಿ ಮಾಡಿದರೂ ಕೇಂದ್ರದ ಕಾಂಗ್ರೆಸ್ ಸರ್ಕಾರ ತಿರಸ್ಕಾರ ಮಾಡಿದೆ!

ಇದೆಲ್ಲದರಿಂದ ನಾವು ತಿಳಿಯಬಹುದಾದುದೇನು? ನಮ್ಮ ಘನ ಸರ್ಕಾರಕ್ಕೆ, ಅದರಲ್ಲಿಯೂ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಸುಭಾಷ್ ಚಂದ್ರ ಬೋಸ್ ರವರ ಸಾವಿನ ಕುರಿತಾದ ಸತ್ಯ ಬಹಿರಂಗವಾಗುವುದೇ ಬೇಕಿಲ್ಲ! ಹೀಗಾಗಿಯೇ ಅವರುಗಳು ಸತ್ಯ ಹೇಳಿದ್ದ ಮುಖರ್ಜಿ ಆಯೋಗದ ವರದಿಯನ್ನು ತಿರಸ್ಕರಿಸಿದ್ದು. ಮತ್ತು ಅದಕ್ಕೂ ಮೊದಲು ತಮ್ಮದೇ ಸರ್ಕಾರಗಳು ರಚಿಸಿದ್ದ ಸಮಿತಿಗಳು ನೀಡಿದ “ವಿಮಾನಾಪಘಾತದಲ್ಲಿ ನೇತಾಜಿಯವರು ಸಾವನ್ನಪ್ಪಿದರು” ಎನ್ನುವ ಹಳೆಯ ಸುಳ್ಳಿಗೇ ಜೋತು ಬಿದ್ದುದು.

ಇದೇನೇ ಇರಲಿ, ಎಲ್ಲರಿಂದಲೂ ‘ನೇತಾಜಿ’ ಎಂದು ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಸುಭಾಷ್ ಚಂದ್ರ ಬೋಸ್ ರವರ ವ್ಯಕ್ತಿತ್ವ ನಿಷ್ಕ್ರಿಯ ಹಾಗು ಪರಮ ಸ್ವಾರ್ಥಿಗಳಾದ ಗಾಂಧೀಜಿ-ನೆಹರುಗಳಿಗಿಂತ ಯಾವಾಗಲೂ ಎತ್ತರದ ಸ್ಥಾನದಲ್ಲಿ ನಿಲ್ಲುವಂತಹುದು. ಬೋಸ್ ನಾಡುಕಂಡ ಶ್ರೇಷ್ಠ ಸ್ವರಾಜ್ಯ ಹೋರಾಟಗಾರರಲ್ಲಿ ಒಬ್ಬರು. ಭಾರತದ ಸೈನ್ಯಬಲದ ಕುರಿತು, ಗಡಿ ರಕ್ಷಣೆ ಕುರಿತು ಅವರಿಗಿದ್ದ ದೃಷ್ಟಿಕೋನ ಇಂದಿನವರೆಗೂ ಯಾವುದೇ ರಕ್ಷಣಾ ಸಚಿವರಿಗೆ ಅರ್ಥವಾಗಿಲ್ಲ. ಬೋಸ್‌ರಂತಹ ಮಹಾನ್ ರಾಷ್ಟ್ರನಾಯಕನ ಜೀವನದ ಘಟನೆಗಳ ಮೆಲುಕೇ ಸ್ಫೂರ್ತಿಯುತ. ಕಲಿಯಬೇಕಾದ ಪಾಠಗಳೂ ಹತ್ತಾರು. ಅತ್ಯುತ್ತಮ ರಾಜತಾಂತ್ರಿಕ ಸಂಬಂಧ ಹೊಂದಿದ್ದ ಬೋಸರು ರಾಷ್ಟಕ್ಕೇ ದಿಗ್ದರ್ಶನ ಮಾಡಿದವರು. ಇಂತಹಾ ಮಹಾತ್ಮ ನೇತಾಜಿ ಸುಭಾಷ್ ಚಂದ್ರ ಬೋಸ್ ರನ್ನು ಇಂದಾದರೂ ನೆನೆಯೋಣ. ನೆನೆದು ಧನ್ಯರಾಗೋಣ....

#ವಂದೇ_ಮಾತರಂ 🇮🇳

Comments

Popular posts from this blog

ಸ್ವಾತಂತ್ರ್ಯ_ಯಾರಿಂದ_ಬಂತು... ಲಾಲಾ_ಲಜಪತ್_ರಾಯ್ 🙏🙏

ಕಾರ್ಗಿಲ್ ವೀರ ಯೋಧರ ನೆನಪು 🙏😍🇮🇳

ಸ್ವಾತಂತ್ರ್ಯ_ಯಾರಿಂದ_ಬಂತು.. #ರಾಜಗುರು 🙏🙏